• January 2, 2026

ಯಾವುದೇ ಕಾರಣಕ್ಕೂ ಚಿತ್ರದ ದೃಶ್ಯಗಳನ್ನು ತೆಗೆದು ಹಾಕಲ್ಲ: ಹೆಡ್ ಬುಷ್ ಚಿತ್ರತಂಡ

ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಗಾಂಧಿನಗರದಲ್ಲಿ ಪರ , ವಿರೋಧದ ಚರ್ಚೆಗಳು ಆರಂಭ ವಾಗಿದೆ. ಚಿತ್ರದಲ್ಲಿನ ದೃಶ್ಯಕ್ಕೆ ಕತ್ತರಿ ಪ್ರಯೋಗಿಸಬೇಕು ಎಂಬ ಮಾತುಗಳು ಕೇಳಿ ಬರ್ತಿದೆ. ಆದರೆ ಚಿತ್ರತಂಡ ಯಾವುದೇ ಕಾರಣಕ್ಕೆ ಚಿತ್ರದಲ್ಲಿನ ದೃಶ್ಯಗಳನ್ನು ಕತ್ತರಿಸುವುದಿಲ್ಲ ಎಂದಿದೆ. ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಯಾವುದೇ ರೀತಿಯ ಅವಮಾನ ಮಾಡಿಲ್ಲ ಎಂದು ನಟ ಧನಂಜಯ್ ಹೇಳಿದ್ದರು. ಆದರೂ ಪ್ರತಿಭಟನೆಗಳು ನಿಂತಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಿತ್ರದ ನಟ ಡಾಲಿ ಧನಂಜಯ್ ಹಾಗೂ ನಿರ್ದೇಶಕ ಶೂನ್ಯ ಪ್ರೆಸ್ ಮೀಟ್ ಕರೆದು ಕ್ಷಮೆ ಕೇಳಿದ್ದರು. ಆದರೂ ಪ್ರತಿಭಟನೆ ನಿಂತಿಲ್ಲ. ಜೊತೆಗೆ ಸಿನಿಮಾದಲ್ಲಿನ ದೃಶ್ಯಗಳನ್ನು ಕತ್ತರಿಸದೆ ಇದ್ದರೆ ಚಿತ್ರವನ್ನು ಬಾಯ್ ಕಾಟ್ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹೆಡ್ ಬುಷ್ ಚಿತ್ರತಂಡ, ವೀರಗಾಸೆಗೆ ನಾವು ಅವಮಾನ ಮಾಡಿಲ್ಲದಿದ್ದರೂ ಕ್ಷಮೆ ಕೇಳಿದ್ದೇವೆ. ಆದರೂ ವಿವಾದದ ಕಾವು ಕಡಿಮೆ ಆಗುತ್ತಿಲ್ಲ. ಸಿನಿಮಾದಿಂದ ದೃಶ್ಯವನ್ನೇ ಕತ್ತರಿಸುವಂತೆ ಒತ್ತಡ ಹೇರಲಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಆ ದೃಶ್ಯವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಚಿತ್ರವನ್ನು ವಿರೋಧಿಸುವವರಿಗಿಂತಲೂ ಅದನ್ನು ಮೆಚ್ಚಿಕೊಂಡವರ ಸಂಖ್ಯೆ ದೊಡ್ಡದಿದೆ ಎನ್ನುವ ಕಾರಣಕ್ಕಾಗಿ ಚಿತ್ರತಂಡ ಈ ನಿರ್ಧಾರಕ್ಕೆ  ಬಂದಿದೆ ಎಂಬ ಮಾತು ಚಿತ್ರತಂಡದ ಕಡೆಯಿಂದ ಬಂದಿದೆ. ಚಿತ್ರದಲ್ಲಿ ವೀರಗಾಸೆ ಹಾಗೂ ಕರಗಕ್ಕೆ ಅವಮಾನ ಮಾಡಲಾಗಿದೆ. ಈ ಮೂಲಕ ಹಿಂದೂ ಧರ್ಮಕ್ಕೆ ಅವಮಾನ ಆಗಿದೆ ಎಂದು ಸಾಕಷ್ಟು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ ತಿಪಟೂರಿನ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ಭಜರಂಗ ದಳದ ಕಾರ್ಯಕರ್ತರು ಧನಂಜಯ್ ಫೋಟೋಗೆ ಚಪ್ಪಲಿ ಹಾರ ಹಾಕಿ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now