ಕಾರವಾರ: ಕನ್ನಡ ಸಿನಿಮಾ ‘ಭಾವಪೂರ್ಣ’ ಚಿತ್ರದ ಚಿತ್ರೀಕರಣದ ವೇಳೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಇಬ್ಬರು ಲೈಟಿಂಗ್ ಸಹಾಯಕರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಜಮಗೋಡಿನ ರೈಲ್ವೆ ನಿಲ್ದಾಣ ರಸ್ತೆಯ ಕ್ರಾಸ್ ಬಳಿ ನಡೆದಿದೆ.
ಮಂಡ್ಯ ಮೂಲದ ರಮೇಶ್ ಮತ್ತು ರಾಮು ಹೆಜ್ಜೇನು ಕಡಿತಕ್ಕೊಳಗಾದ ಲೈಟಿಂಗ್ ಸಹಾಯಕರು. ಹೆಜ್ಜೇನು ದಾಳಿ ಮಾಡುತ್ತಲೇ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದದವರು ಅಲ್ಲಿಂದ ಓಡಿ ಹೋಗಿದ್ದಾರೆ. ಈ ವೇಳೆ ರಮೇಶ್ ಹಾಗೂ ರಾಮು ಮೇಲೆ ನೂರಾರು ಜೇನು ನೊಣಗಳು ದಾಳಿ ನಡೆಸಿವೆ. ಇದರಿಂದ ಇಬ್ಬರೂ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಅವರಿಗೆ ಇತರರು ಸಹಾಯ ಮಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.

ಘಟನೆಯ ಬಳಿಕ ಸ್ಥಳೀಯ ಆಟೋ ಚಾಲಕನ ಸಹಾಯದಿಂದ 108ಕ್ಕೆ ಕರೆ ಮಾಡಿದ್ದು, ಗಾಯಾಳುಗಳನ್ನು ರಕ್ಷಿಸಿ ಅಂಕೋಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.