ಬೆಂಗಳೂರು: ಸಹೋದರನಿಂದಲೇ ಭೀಕರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕಾರ್ಪೋರೇಟರ್ ಪತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಿಬಿಎಂಪಿ 139ನೇ ವಾರ್ಡ್ ನ ಮಾಜಿ ಕಾರ್ಪೋರೇಟರ್ ನಜೀಮಾ ಪತಿ ಆಯುಬ್ ಖಾನ್ ಮೃತ ವ್ಯಕ್ತಿ. ನಿನ್ನೆ ಆಯುಬ್ ಖಾನ್ ರ ಚಿಕ್ಕಪ್ಪನ ಮಗ ಮಥೀನ್ ಖಾನ್ ನಿನ್ನೆ ಏಕಾಏಕಿ ಆಯುಬ್ ಖಾನ್ ಅವರಿಗೆ ಮನಸೋ ಇಚ್ಚೇ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಆಯುಬ್ ಖಾನ್ ರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಆಸ್ತಿಯ ವಿಚಾರವಾಗಿ ಆಯುಬ್ ಖಾನ್ ರ ಕೊಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ರಾಜಕೀಯ ದೃಷ್ಟಿಯಿಂದ ಈ ಕೊಲೆ ನಡೆದಿರೋದಾಗಿ ಆಯುಬ್ ಖಾನ್ ಬೆಂಬಲಿಗರು ಆರೋಪಿಸುತ್ತಿದ್ದಾರೆ. ರಾಜಕೀಯವಾಗಿ ಆಯುಬ್ ಖಾನ್ ರನ್ನು ಬೆಳೆಯೋದಕ್ಕೆ ಬಿಡದೆ ಈ ರೀತಿ ಮಾಡಿದ್ದಾರೆ ಎನ್ನಲಾಗ್ತಿದೆ.
ಆಯುಬ್ ಖಾನ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು KSRP ತುಕಡಿ ಹಾಗೂ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಚಾಮರಾಜಪೇಟೆ ಪೊಲೀಸರು ಆರೋಪಿ ಮಥೀನ್ ಖಾನ್ ಹಾಗೂ ಇತರ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.