• March 15, 2026

1 ಕೋಟಿ 20 ಲಕ್ಷ ವೆಚ್ಚದಲ್ಲಿ ಸಾರ್ವಜನಿಕರಿಗಾಗಿ ಲೀಲಾವತಿ ಕಟ್ಟಿಸಿದ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಸ್ಯಾಂಡಲ್ ವುಡ್ ಹಿರಿಯ ನಟಿ ಡಾ.ಲೀಲಾವತಿ ನೆಲಮಂಗಲದ ಬಳಿ ಇರುವ ಸೋಲದೇವನ ಹಳ್ಳಿಯಲ್ಲಿ ಕಟ್ಟಿಸಿರುವ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿ ಲೀಲಾವತಿ ಸಮಾಜ ಸೇವೆಯನ್ನು ಮನಸಾರೆ ಹೊಗಳಿದರು. ಚೆನ್ನೈನಲ್ಲಿ ಇದ್ದ ಭೂಮಿಯನ್ನು ಮಾರಿ ಅದರಿಂದ ಬಂದ ಹಣದಲ್ಲಿ ಲೀಲಾವತಿ ಆಸ್ಪತ್ರೆ ಕಟ್ಟಿಸಿದ್ದಾರೆ. ಅಲ್ಲದೆ ಉದ್ಘಾಟನೆ ಬಳಿಕ ಆಸ್ಪತ್ರೆಯನ್ನು ಸರ್ಕಾರಕ್ಕೆ ಬಿಟ್ಟುಕೊಡುವುದಾಗಿ ಈ ಹಿಂದೆಯೇ ಹೇಳಿದ್ದರು. ಕಳೆದ ಕೆಲ ದಿನಗಳ ಹಿಂದೆಯೇ ಮುಖ್ಯಮಂತ್ರಿಯನ್ನು ಭೇಟಿಯಾಗಿ ಆಸ್ಪತ್ರೆ ಉದ್ಘಾಟಿಸಲು ಕೇಳಿಕೊಂಡಿದ್ದರು. ಇದೀಗ ಮುಖ್ಯಮಂತ್ರಿಗಳು ಲೀಲಾವತಿ ಹಾಗೂ ವಿನೋದ್ ರಾಜ್ ಕುಮಾರ್ ಕಟ್ಟಿಸಿರುವ ನೂತನ ಆಸ್ಪತ್ರೆಯನ್ನು ಉದ್ಘಾಟಿಸಿದರು. ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ‘ಸೋಲದೇವನಹಳ್ಳಿ ಅಂದ್ರೆ ಏನಿದು ಅಂತ ಯೋಚನೆ ಮಾಡ್ತಿದ್ದೆ. ದೇವರು ಕೂಡ ಇಲ್ಲಿಯ ನಿಸರ್ಗ ಸೌಂದರ್ಯಕ್ಕೆ ಸೋತಿರುವುದೇ ಸೋಲದೇವನಹಳ್ಳಿ. ಇಂತಹ ಜಾಗದಲ್ಲಿ ಲೀಲಾವತಿ ಅವರು ನೆಲೆಸಿದ್ದಾರೆ. ಬದುಕಿನಲ್ಲಿ ನಿರಂತರವಾಗಿ ಎಲ್ಲವನ್ನೂ ನೀಡಿ, ಎಲ್ಲಾ ಅಡೆತೆಡೆಗಳನ್ನೂ ಹಾಗೂ  ಹಲವಾರು ಸವಾಲನ್ನು ಎದರಿಸಿದ್ದಾರೆ. ಲೀಲಾವತಿಯವರು ಮನಸ್ಸು ಮಾಡಿದ್ರೆ ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆ ಮಾಡಿಕೊಂಡು ನೆಮ್ಮದಿಯಾಗಿ ಜೀವನ ಮಾಡಬಹುದಿತ್ತು. ಆದರೆ, ಎಲ್ಲಾ ಬಿಟ್ಟು ಈ ಸೋಲದೇವನಹಳ್ಳಿಗೆ ಬಂದು ತೋಟ ಮಾಡಿದ್ದಾರೆ. ಅವರೇ ಹೇಳಿದ ಹಾಗೇ ಈ ಜಾಗ ಸಮತಟ್ಟಾಗಿರಲಿಲ್ಲ. ಆದ್ರೆ ಅವರ ಮನಸ್ಸು ಸಮತಟ್ಟವಾಗಿದೆ’ ಎಂದರು. ಇದೇ ವೇಳೆ ಮಾತನಾಡಿದ ಬೊಮ್ಮಾಯಿ, ಸೋಲದೇವನಹಳ್ಳಿಗೆ ಒಂದು ಪಶು ಆಸ್ಪತ್ರೆ ಬೇಕು ಎಂದು ಲೀಲಾವತಿ ಕೇಳಿದ್ದಾರೆ. ಆದಷ್ಟು ಬೇಗ ಈ ಬೇಡಿಕೆಯನ್ನು ಈಡೇರಿಸುತ್ತೇನೆ ಎಂದರು. ಲೀಲಾವತಿ ಅವರು ನಿರ್ಮಿಸಿರುವ ಆಸ್ಪತ್ರೆಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸುವ ಭರವಸೆ ನೀಡಿದ್ದು, ಸರ್ಕಾರದಿಂದ ಡಾಕ್ಟರ್ ಹಾಗೂ ನರ್ಸ್ ನೇಮಿಸುವುದಾಗಿ ತಿಳಿಸಿದರು. ಇನ್ನೂ ನಟ ವಿನೋದ್ ರಾಜ್ ಮಾತನಾಡಿ, ಒಟ್ಟು 1 ಕೋಟಿ 20 ಲಕ್ಷ ಖರ್ಚು ಮಾಡಿ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ. ಇದು ಸೋಲದೇವನಹಳ್ಳಿ ಜನರಿಗೆ ಸಹಾಯವಾಗಲಿ ಎಂದು ಕಟ್ಟಿದ್ದೇವೆ. ಇಂದೇ ಆಸ್ಪತ್ರೆಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುತ್ತೇವೆ ಎಂದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now