ವಿವಾದಿತ ಸ್ವಾಮಿ ಎಂದೇ ಹೆಸರು ಮಾಡಿರುವ ನಿತ್ಯಾನಂದರ ಮೇಲೆ ಅತ್ಯಾಚಾರ ಪ್ರಕರಣ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ಪ್ರಕರಣಗಳು ದಾಖಲಾಗಿವೆ. ಇದರ ನಡುವೆಯು ನಿತ್ಯಾನಂದ ದೇಶ, ವಿದೇಶದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ಇದೀಗ ನಿತ್ಯಾನಂದರ ಭಕ್ತರೊಬ್ಬರು ತಮಿಳುನಾಡಿನಲ್ಲಿ 18 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದಾರೆ.
ನಿತ್ಯಾನಂದರ ಶಿಷ್ಯ ಬಾಲಸುಬ್ರಮಣ್ಯಂ ಎಂಬುವವರು ನಿತ್ಯಾನಂದರ ಪ್ರತಿಮೆ ನಿರ್ಮಿಸಿದ್ದು, ಕುಂಭಾಭಿಷೇಕದ ಮೂಲಕ ಅನಾವರಣಗೊಳಿಸಿದ್ದಾರೆ.
ವಿಲ್ಲುಪುರಂ ಜಿಲ್ಲೆಯ ವನೂರಿನ ಪೆರಂಬೈ ಗ್ರಾಮದ ಸಮೀಪದಲ್ಲಿರುವ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಶಿವ ರೂಪದಲ್ಲಿ ನಿತ್ಯಾನಂದರ ಪ್ರತಿಮೆ ಸ್ಥಾಪಿಸಲಾಗಿದೆ. ಪ್ರತಿಮೆಯ ಒಂದು ಕೈಯಲ್ಲಿ ಹುಲಿಯ ಚರ್ಮದ ಧರಿಸು ಮತ್ತು ಕೈಯಲ್ಲಿ ತ್ರಿಶೂಲ ಇರಿಸಲಾಗಿದೆ. ದೇವಸ್ಥಾನದಲ್ಲಿ ನಿತ್ಯಾನಂದರ ಪ್ರತಿಮೆ ಅನಾವರಣ ಹಾಗೂ ಕುಂಭಾಭಿಷೇಕದ ಸುದ್ದಿ ತಿಳಿದ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಶಿವನ ರೂಪದಲ್ಲಿ ನಿತ್ಯಾನಂದರ ಪ್ರತಿಮೆ ರೂಪಿಸಿರೋದ್ರಿಂದ ಭಕ್ತರು ಆಕ್ರೋಶಗೊಂಡಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿಯಾದ ಬಾಲಸುಬ್ರಮಣ್ಯಂ ನಿತ್ಯಾನಂದರ ಪರಮ ಭಕ್ತರಾಗಿದ್ದು ಅವರ ರೂಮಿನಲ್ಲಿ ನಿತ್ಯಾನಂದರ ಸಾಕಷ್ಟು ಫೋಟೋಗಳನ್ನ ಹಾಕಿಕೊಂಡಿದ್ದಾರೆ. ಅಲ್ಲದೆ ನಿತ್ಯಾನಂದರ ಪ್ರತಿಮೆಗೆ ನಿತ್ಯಾ ಪೂಜೆ ಸಲ್ಲಿಸಿರುವುದು ತಿಳಿದು ಬಂದಿದೆ.